ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ ಕಿರುಕವನ (ಲಿರಿಕ್). ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಭಾರತಾದ್ಯಂತ ಬೀಸಿದ ಪುನರುಜ್ಜೀವನದ ಗಾಳಿಯಲ್ಲಿ ಕನ್ನಡವೂ ತನ್ನ ಹೊಸತನ ಕಂಡುಕೊಂಡು ಸೃಷ್ಟಿಸತೊಡಗಿದ ನವೋದಯ ಕಾವ್ಯ ಪ್ರಕಾರವನ್ನು ನಿರ್ದೇಶಿಸಲು ಹುಟ್ಟಿಕೊಂಡ ಪದ ಭಾವಗೀತೆ. ಇದು ಇಂಗ್ಲಿಷಿನ ಲಿರಿಕ್ ಎಂಬುದಕ್ಕೆ ಸಂವಾದಿಪದ. ನವೋದಯ ಕಾವ್ಯ ಪಾಶ್ಚಾತ್ಯ ರೊಮ್ಯಾಂಟಿಕ್ ಕವಿಗಳ ಲಿರಿಕ್ ಕಾವ್ಯದ ಪ್ರೇರಣೆ ಪ್ರಚೋದನೆಗಳ ಪರಿಣಾಮವಾದುದರಿಂದ ವಸ್ತು, ರೀತಿ ಹಾಗೂ ದೃಷ್ಟಿಯಲ್ಲಿ ಹಿಂದಿನ ಕನ್ನಡ ಕಾವ್ಯ ಪ್ರಕಾರಗಳಿಂದ ಬೇರೆಯೆಂದೇ ತೋರುವ ಈ ನವೋದಯ ಕಾವ್ಯಪ್ರಕಾರವನ್ನು ಹೆಸರಿಸಲು ಲಿರಿಕ್ ಎಂಬ ಪದದ ಅನುವಾದದಂತಿದೆ ಭಾವಗೀತೆ.
ಮಾನವ ಹೃದಯಸಹಜವಾದ ಅನೇಕ ಭಾವಗಳನ್ನು ಅನುಸರಿಸಿ ಕವನಗಳಲ್ಲಿ ಅವುಗಳ ಪ್ರಾಮುಖ್ಯ ಗಮನಿಸಿ
- ಪ್ರಕೃತಿಗೀತೆಗಳು,
- ಪ್ರೇಮಗೀತೆಗಳು,
- ಕೌಟುಂಬಿಕ ಗೀತೆಗಳು,
- ಸಾಮಾಜಿಕ ಗೀತೆಗಳು,
- ದೇಶ ಮತ್ತು ಭಾಷಾಗೀತೆಗಳು,
- ಗಣ್ಯವ್ಯಕ್ತಿಗೀತೆಗಳು,
- ಹಾಸ್ಯಗೀತೆಗಳು, ಕಥನ ಕವನಗಳು, ತತ್ತ್ವಚಿಂತನ ಗೀತೆಗಳು, ಅಧ್ಯಾತ್ಮಗೀತೆಗಳು ಎಂದು ಮುಂತಾಗಿ ವರ್ಗೀಕರಿಸಲಾಗಿದೆ
ಭಾವಗೀತೆಯೂ ಒಂದು ವಿಶಿಷ್ಟ ಸಂದರ್ಭದಲ್ಲಿ ರಚನೆಯಾಗುತ್ತವೆ. ಉದಾ: ಸೂರ್ಯೋದಯ, ಒಂದು ಹಕ್ಕಿಯ ಹಾಡನ್ನು ಆಲಿಸುವುದು, ರಾತ್ರಿ ಎಲ್ಲಿಯೋ ಮಗುವಿನ ಅಳುವನ್ನು ಕೇಳುವುದು, ಒಂದು ಹುಡುಗಿಯಲ್ಲಿ ಪ್ರೇಮ ಕವಿ ಪ್ರೀತಿಸಿದ ಸ್ಪಂದನಕ್ಕೆ ಶಬ್ದ ಶರೀರವನ್ನು ನೀಡುತ್ತದೆ. ಆದರೆ ಕವಿ ಶ್ರೇಷ್ಠ ಕವಿಯಾದರೆ ಅವನ ಎಲ್ಲ ಭಾವಗೀತೆಗಳನ್ನು ಓದಿದಾಗ ಅವನ ಸಮಗ್ರ ಸ್ಪಂದನ ನಮಗೆ ಅರಿವಾಗುತ್ತದೆ.)
- ಪ್ರಕೃತಿಗೀತೆಯೆಂದರೆ……?
ಕವಿ ತಾನು ನೋಡಿದ ಪ್ರಕೃತಿಯನ್ನು ಕುರಿತು, ಅಭಿವ್ಯಕ್ತಿಸುವ ಭಾವನೆಗಳೇ
ಪ್ರಕೃತಿಗೀತೆಗಳು.
ಪಂಪ ಮಹಾಕವಿ ಬನವಾಸಿ ಮಾರ್ಗವಾಗಿ ಸಂಚರಿಸುವಾಗ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು, ತಾನು ಬನವಾಸಿಯಲ್ಲಿಯೇ ಕೋಗಿಲೆಯಾಗಿಯೋ, ಮರಿದುಂಬಿಯಾಗಿಯೋ ಹುಟ್ಟಬೇಕೆಂದು ಅಪೇಕ್ಷಿಸುತ್ತಾನೆ. ತನ್ನ 'ವಿಕ್ರಮಾರ್ಜುನ ವಿಜಯ' ಮಹಾಕಾವ್ಯದಲ್ಲಿ ಬನವಾಸಿಯ ವರ್ಣನೆಯನ್ನು ಕುರಿತು ಮೂರು ಪದ್ಯಗಳನ್ನೇ ರಚಿಸಿದ್ದಾನೆ. ಅಲ್ಲಿನ ಪ್ರಕೃತಿ ಪಂಪನ ಕವಿ ಹೃದಯವನ್ನು ಅಷ್ಟು ಗಾಢವಾಗಿ ಮನಸೂರೆಗೊಳ್ಳುವುದಾದರೇ, ಇನ್ನು ಮಲೆನಾಡ ಮಡಿಲಿನಲ್ಲಿಯೇ ಹುಟ್ಟಿ ಬೆಳೆದ ಕುವೆಂಪು ಅವರ ಮೇಲೆ ಅದೆಷ್ಟು ಪ್ರಭಾವ ಬೀರಿರಬಹುದು? ಮಲೆನಾಡಿಗೆ ಇನ್ನೊಂದು ಹೆಸರೇ ಕುವೆಂಪು ಅವರೆಂದರೇ ಅತಿಶಯೋಕ್ತಿಯಲ್ಲ. ಜಿ.ಎಸ್ ಶಿವರುದ್ರಪ್ಪನವರ ಮಾತಿನಂತೆ "ಸಹ್ಯಾದ್ರಿಯ ಪರ್ವತಾರಣ್ಯ ಪ್ರಪಂಚವೇ ತನ್ನ ಅಭಿವ್ಯಕ್ತಿಗಾಗಿ ಕುವೆಂಪು ಅವರಂಥ ಕವಿಯನ್ನು ಸೃಷ್ಟಿಸಿತೋ ಏನೋ! ಕನ್ನಡದಲ್ಲಿ ನಿಸರ್ಗವನ್ನು ಗಾಢವಾಗಿ ಒಲಿದ ಹಾಗೂ ಅದರ ಚೆಲುವನ್ನು ಕುರಿತು ಬರೆದ ಕವಿಗಳು ಹಲವರಿದ್ದಾರೆ. ಆದರೆ ಅವರ್ಯಾರೂ ಬಹುಶಃ ಕುವೆಂಪು ಅವರಂತೆ ಇಂಥ ದುರ್ಗಮ ಅರಣ್ಯಶ್ರೇಣೀಯ ದಟ್ಟವಾದ ಅನುಭವಗಳಲ್ಲಿ ಬೇರೂರಿ ಬೆಳೆದವರಲ್ಲ. ಕನ್ನಡದ ಮೊದಲ ಕವಿ ಪಂಪನನ್ನು ಹೊರತುಪಡಿಸಿದರೆ ಯಾರೂ ಕುವೆಂಪು ಅವರಂತೆ ರಮ್ಯತೆಯಿಂದ ಮೊದಲುಗೊಂಡು ಭವ್ಯತೆಯವರೆಗಿನ, ಅರಣ್ಯ ನಿಸರ್ಗಾನುಭವಗಳನ್ನು ಗ್ರಹಿಸಿ ಅಭಿವ್ಯಕ್ತಿಸಿದವರಲ್ಲ." ಎಂಬುದು ಸಮಂಜಸವಾಗಿದೆ. ೧೯೩೦ರಲ್ಲಿ ಪ್ರಕಟಗೊಂಡ ಅವರ ಮೊದಲ ಕವನ ಸಂಕಲನ 'ಕೊಳಲು'ವಿನ ಮೊದಲ ಕವಿತೆಯಲ್ಲೇ 'ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು.' ಎನ್ನುತ್ತಾ ಕಾಡಿನೊಂದಿಗಿರುವ ತಮ್ಮ ನಿಕಟ ಬಾಂಧವ್ಯವನ್ನು ಹೇಳುತ್ತಲೇ ಕನ್ನಡ ಸಾಹಿತ್ಯ ಲೋಕವನ್ನು ಕುವೆಂಪು ಪ್ರವೇಶಿಸಿದರು. ಕವಿತೆಗಳು ಮಾತ್ರವಲ್ಲದೆ, ಕತೆ ಕಾದಂಬರಿಗಳ ಮೂಲಕ ಇನ್ನಷ್ಟು ಗಾಢವಾಗಿ ನಿಸರ್ಗಾನುಭೂತಿಯನ್ನು ಕಟ್ಟಿಕೊಟ್ಟರು. ಇವುಗಳಿಗೆಲ್ಲಾ ಮೂಲ ದ್ರವ್ಯ ಒದಗಿಸಿದ್ದೇ ಮಲೆನಾಡಿನೊಂದಿಗಿನ ಅವರ ಅನುಭವಗಳು. ಮುಂದೆ ಕುವೆಂಪು ಅವರು ಮೈಸೂರಿನಲ್ಲಿರುವಾಗ ತಮ್ಮ ಈ ಅನುಭವಗಳನ್ನು, ಬಾಲ್ಯದ ನೆನಪುಗಳನ್ನು ವೆಂಕಣ್ಣಯ್ಯ, ತೀ.ನಂ.ಶ್ರೀ, ಡಿ.ಎಲ್.ನ ಮೊದಲಾದ ಮಿತ್ರರೊಂದಿಗೆ ಹಂಚಿಕೊಳ್ಳುವಾಗ, ವೆಂಕಣ್ಣಯ್ಯನವರು ಈ ಅನುಭವಗಳನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ನೀಡಿದ ಸಲಹೆಯ ಪರಿಣಾಮವೇ 'ಮಲೆನಾಡಿನ ಚಿತ್ರಗಳು' ಎಂಬ ಸುಂದರ ಹೊತ್ತಿಗೆ.
ಚಿತ್ರಗಳ ಆರಂಭದಲ್ಲಿಯೇ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ವರ್ಣಿಸುವ 'ಮಲೆನಾಡಿಗೆ ಬಾ' ಕವಿತೆಯ ಕೊನೆಯ ಸಾಲುಗಳಲ್ಲಿ,
'ರನ್ನನು ಪಂಪನು ಬಹರಿಲ್ಲಿ;
ಶ್ರೀ ಗುರುವಿಹನಿಲ್ಲಿ !
ಮಿಲ್ಟನ್, ಷೆಲ್ಲಿ ಬಹರಿಲ್ಲಿ ;
ಕವಿವರರಿಹರಿಲ್ಲಿ !
ಮುದ್ದಿನ ಹಳ್ಳಿ
ಈ ಕುಪ್ಪಳ್ಳಿ ;
ಬಾ, ಕಬ್ಬಿಗ ನಾನಿಹೆನಿಲ್ಲಿ !
ಎನ್ನುತ್ತಾ ಓದುಗರನ್ನು ಕುಪ್ಪಳ್ಳಿಗೆ ಆಹ್ವಾನಿಸುತ್ತಾರೆ. ಯಾವೊಬ್ಬ ಕವಿಯು ಹೀಗೆ ತಾನು ಹುಟ್ಟಿಬೆಳೆದ ಪರಿಸರದಲ್ಲಿ ನಾನಿರುವೆ ಬನ್ನಿ ಎಂದು ಕಾವ್ಯಾಸಕ್ತರನ್ನು ಆಹ್ವಾನಿಸಿದ ಉದಾಹರಣೆಯಿಲ್ಲ. ಅವರ ಮನೆಯ ತೆಂಕಣ ದಿಕ್ಕಿಗಿರುವ ಬೆಟ್ಟದ ಮೇಲೆ ಏರಿ ಹೋದರೆ ಕಾಣುವ ಸ್ಥಳ ಸಾಮಾನ್ಯರ ಕಣ್ಣಿಗೆ ಬರಿ ಕಲ್ಲುಕಾಡಾಗಿ ಕಂಡರೆ, ಕಲಾವಂತರಿಗೆ ಸ್ವರ್ಗದಂತೆ ಭಾಸವಾಗುವ 'ಕವಿಶೈಲ' ಮತ್ತು 'ನವಿಲು ಕಲ್ಲು'ಗಳ ವರ್ಣನೆಯನ್ನು ಅವರ ಪದಗಳಲ್ಲಿಯೇ ಓದಿ ಸವಿಯಬೇಕು. 'ಹಾಸ್ಯದ ಚಟಾಕಿ'ಯಲ್ಲಿ ಕುವೆಂಪು ಅವರು ಮಿತ್ರರೊಡಗೂಡಿ ಕಾಡಿನ ಬೇಟೆಗೆಂದು ಹೋದಾಗ ಅವರ ನಾಯಿಗೂ ನಾಗರಹಾವಿಗೂ ನಡೆವ ಜಟಾಪಟಿಯ ವಿನೋದ ಪ್ರಸಂಗ, 'ಕಾಡಿನಲ್ಲಿ ಕಳೆದ ಒಂದಿರುಳು' ಚಿತ್ರದಲ್ಲಿ ಬೇಟೆಗೆಂದು ಮಿತ್ರರೊಡನೆ ಹೋದಾಗ ಕಾಡಿನ ಕಗ್ಗತ್ತಲೆಯಲ್ಲಿ, ಜತೆಗೆ ತಂದಿದ್ದ ಕಾಫಿಯನ್ನು ಕುಡಿಯುವಾಗ ಕತ್ತಲೆಯಲ್ಲಿ ಮೂಗು ಬಾಯಿಯ ವ್ಯತ್ಯಾಸ ಗೊತ್ತಾಗದೆ ಕುಡಿದ ಕಾಫಿ ಮೂಗಿಗೂ ಹೋಗಿ ಕೆಮ್ಮು, ಸೀನು ಬಂದು ಆ ನೀರವ ಕಾಡಿನ ಮೌನದಲ್ಲಿ ಇವರ ಧ್ವನಿ ಪ್ರತಿಧ್ವನಿಸಿ, ಕಾಡು ಮಾವಿನ ಹಣ್ಣನ್ನು ತಿನ್ನಲು ಬಂದ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿದ್ದು, ಜತೆಯಿದ್ದ ಬೇಟೆಗಾರ ಇಟ್ಟ ಗುರಿ ಇದರಿಂದಾಗಿ ತಪ್ಪಿದ್ದು, ಹಿಂತಿರುಗಿ ಬರುವಾಗ ಇವರ ಕೆಮ್ಮು, ಸೀನಿನಿಂದಾಗಿ ಕೆಲಸ ಕೆಟ್ಟದಕ್ಕೆ ಸನ್ಮಾನವೂ ಆದದ್ದು ಬಹಳ ಸೊಗಸಾಗಿವೆ. 'ಅಜ್ಜಯ್ಯನ ಅಭ್ಯಂಜನ'ದ ಮಹೋತ್ಸವ, 'ಬಂದನಾ ಹುಲಿರಾಯನು' ಚಿತ್ರದಲ್ಲಿ ಹುಲಿರಾಯನ ವರ್ಣನೆ- ಕೂದಲೆಳೆಯಿಂದ ಹುಲಿಯಿಂದ ಪಾರಾಗುವ ರಂಗಯ್ಯನ ಪ್ರಾಣ ಸಂಕಟ, 'ಪುಟ್ಟಾಚಾರಿಯ ಕಾಡುಕೋಳಿ'ಯ ಚಿತ್ರದಲ್ಲಿ ಪುಟ್ಟಾಚಾರಿ ಒಮ್ಮೆ ಬೇಟೆಗೆಂದು ಕಾಡಿಗೆ ಹೋದಾಗ ಎದೆಯೆತ್ತರ ಬೆಳೆದ ಹುಲ್ಲಿನಲ್ಲಿ ಹೆಣ್ಣು ಹೆಬ್ಬುಲಿಯೊಂದು ತನ್ನ ಮರಿಗಳೊಡನೆ ಚೆಲ್ಲಾಟವಾಡುತ್ತಿದ್ದಾಗ, ಹುಲಿಯ ಬಾಲದ ತುದಿ ಮಾತ್ರ ಹುಲ್ಲಿನ ಮೇಲೆ ಕುಣಿದಾಡುವುದನ್ನು ಕಂಡು ಅದನ್ನು ಕಾಡುಕೋಳಿಯ ಪುಕ್ಕವೆಂದು ಭಾವಿಸಿ ಬಳಿ ಹೋಗಿ ನೋಡಿದಾಗ ಹುಲಿ ಎದ್ದು ನಿಂತು ಗುರ್ರೆಂದಾಗ ಜೀವ ಹೋದಂತಾಗಿ ಫಜೀತಿ ಪಟ್ಟುಕೊಂಡು ಕೋವಿ ಗುರಿ ಮಾಡಿ ಹುಲಿಗೆ ಅರಿವಾಗದಂತೆ ಒಂದೊಂದೆ ಹೆಜ್ಜೆ ಹಿಂದೆ ಇಟ್ಟು ಪಾರಾಗುವ ಪೇಚಿನ ಪ್ರಸಂಗ ನಗು ಅಳು ಎರಡನ್ನೂ ಒಟ್ಟಿಗೆ ಬರಿಸುತ್ತವೆ. ಇನ್ನು ಉಳಿದವುಗಳು ಕೂಡ ಹೀಗೆ ಒಂದಕ್ಕಿಂತ ಒಂದು ಮಿಗಿಲಾದ ಅವರ ಅನುಭವದ ಚಿತ್ರಗಳು, ಆ ಚಿತ್ರಗಳಲ್ಲಿನ ಪ್ರತಿಯೊಂದು ಸರಳವಾದ ವಿಷಯಗಳನ್ನು ಅವರು ವರ್ಣಿಸಿರುವ ಪರಿ, ಅದರ ವಿವರಣೆಗಳು, ಪ್ರಕೃತಿಯನ್ನು ವರ್ಣಿಸಲು ಇನ್ನು ಪದಗಳೇ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಓದುತ್ತಾ ಹೋದಂತೆ ನಾವುಗಳು ಇರುವ ಜಾಗದಿಂದಲೇ ಕುಪ್ಪಳ್ಳಿಯನ್ನು ಸಾಕ್ಷಾತ್ ಕಂಡ ಅನುಭವವಾಗುತ್ತದೆ. ಮಲೆನಾಡಿನ ಮಡಿಲಲ್ಲಿ ನಾವೇ ಮಗುವಾಗುತ್ತೇವೆ..
ಕನ್ನಡದ ಪ್ರಮುಖ ಪ್ರಕೃತಿ ಗೀತೆಗಳು ಮತ್ತು ಕವಿಗಳು
- ಚನ್ನವೀರ ಕಣವಿ - ಒಂದು ಮುಂಜಾವಿನಲಿ
- ದ.ರಾ.ಬೇಂದ್ರೆ - ಮೂಡಲ ಮನೆಯ ಮುತ್ತಿನ ನೀರಿನ > ಶ್ರಾವಣ ಬಂತು
- ಜಿ.ಎಸ್.ಶಿವರುದ್ರಪ್ಪ - ಮುಂಗಾರಿನ.ಅಭಿಷೇಕಕೆ ಮಿದುವಾಯಿತು ನೆಲವು
- ಪು.ತಿ.ನರಸಿಂಹಾಚಾರ್ - ಭವದ ಮಾಯೆ ಅಡಗುವಂತೆ
- ಕೆ.ಎಸ್.ನಿಸಾರಹಮದ್ - ಜೋಗದ ಸಿರಿ
- ಕೆ.ಎಸ್.ನರಸಿಂಹಸ್ವಾಮಿ - ನಟ್ಟಿರುಳ ಕರಿಮುಗಿಲ
- ಜಿ.ಪಿ.ರಾಜರತ್ನಂ - ಮಡಿಕೇರಿ ಮೇಲ್ ಮಂಜು / madikeri mel manju
ಹಸುರು ಪದ್ಯಕ್ಕೆ ಸಂಬಂಧಿಸಿದ ವಿಡಿಯೋಗಳು