ಕಥಾ ಸಾಹಿತ್ಯ
ಸ್ವಭಾವ ಸಹಜವಾಗಿ ಮೂಡಿಬಂದ ಮಾನವನ ವಿವಿಧ ಪ್ರವೃತ್ತಿಗಳಲ್ಲಿಯೇ
ವಿವಿಧ ಕಲೆಗಳ ಉಗಮವಿದೆ. ಸುಖ, ದುಃಖ, ಜಿಗುಪ್ಸೆ, ಭಯಗಳುಂಟಾದಾಗ ಮನುಷ್ಯ ವಿವಿಧ ಹಾವಭಾವಗಳ ಮೂಲಕ
ಅದನ್ನು ಅಭಿವ್ಯಕ್ತಗೊಳಿಸುತ್ತಾನೆ. ಇದು ಸಹಜ ಕ್ರಿಯೆ.
ಇದನ್ನು ಪ್ರಕಟಿಸಲು ಮನುಷ್ಯ ಎರಡು ಮಾರ್ಗಗಳನ್ನು
ಕಂಡುಕೊಂಡಿದ್ದಾನೆ. ಒಂದು : ತನ್ನಲ್ಲುಂಟಾದ ಆಂತರಿಕ ಮತ್ತು ಭಾವನಾತ್ಮಕ ಸಂವೇಧನೆಗಳನ್ನು ಲಲಿತಕಲೆಗಳ
ಮೂಲಕ ಹೊರಹಾಕುವುದು. ಎರಡು : ಬುದ್ಧಿ ಗಮ್ಯವಾದ ವಿಚಾರಗಳನ್ನು ನಾಟ್ಯ, ನೃತ್ಯ, ಕಾವ್ಯ, ಕಥನಕಲೆಗಳ
ಮೂಲಕ ವ್ಯಕ್ತಪಡಿಸುವುದು. ಹೀಗೆ ಬುದ್ಧಿಗಮ್ಯವಾದ ವಿಚಾರವನ್ನು ಸತ್ಯದೊಂದಿಗೆ ಕಲ್ಪನೆ ಸೇರಿಸಿ ಹೇಳುವುದೇ
ಕಥೆ.
ಮಾನವನ ಹುಟ್ಟಿನಿಂದ ಸಾವಿನವರೆಗೆ ಕಥೆಗಳು ಹರಡಿಕೊಂಡಿದ್ದು,
ಮನುಷ್ಯನ ಜೀವನವೇ ಒಂದು ಕಥೆಯಾಗಿದೆ. ಈ ಕಥನ ಕಲೆಯು
ಯಾವುದೊಂದು ದೇಶಕ್ಕಾಗಲಿ, ಕಾಲಕ್ಕಾಗಲಿ ಸೀಮಿತವಾದುದಲ್ಲ. ನಾಗರೀಕತೆಯ ಪೂರ್ವದಲ್ಲಿ ಮಾನವನು ಗೆಡ್ಡೆಗೆಣಸು
ತಿನ್ನುತ್ತ, ಬಯಲಿನಲ್ಲಿ ಬೆತ್ತಲೆಯ ಬದುಕು ಸಾಗಿಸುತ್ತಿರುವಾಗಿನಿಂದ ಹಿಡಿದು, ಚಂದ್ರಲೋಕದಲ್ಲಿ ಮನೆ
ಕಟ್ಟುತ್ತಿರುವವರೆಗೂ ಈ ಕತೆ ಹೇಳುವ, ಕೇಳುವ, ಓದುವ, ಬರೆಯುವ ವೈವಿಧ್ಯತೆಯಿಂದೊಡಗೂಡಿದ ಕಲೆ ಅವಿರಳವಾಗಿ,
ಅವಿಚ್ಛಿನ್ನವಾಗಿ ಹರಿದು ಬೆಳೆದು ಬಂದಿದೆ. ಪ್ರಕೃತಿಯ ಅದ್ಭುತ ಬದಲಾವಣೆಗಳಲ್ಲಿ ಅದರಿಂದ ಹೊರಹೊಮ್ಮುವ
ವರ್ಣನಾತ್ಮಕ ರೂಪಗಳಲ್ಲಿ, ಮಾನವನ ಬುದ್ಧಿಯ ಸವಾಲುಗಳಾಗಿ, ಉತ್ತರಿಸಲಾಗದ ಒಗಟುಗಳಾಗಿ ತೋರಿದ ಅನಂತ
ಸೃಷ್ಟಿಕ್ರಿಯೆಗಳೇ ಈ ಕಥನಕಲೆಗೆ ಮೂಲವೆಂದು ಹೇಳಬಹುದು.
‘ಕಥೆ’ ಪದದ ನಿಷ್ಪತ್ತಿ
:
·
ಕಥೆಯೆಂಬ ಪದ ‘ಕಥಾ’ ಎಂಬ ಸಂಸ್ಕೃತ ಪದದಿಂದ ಬಂದಿದೆ. ಕಥಾ ಎಂಬ ಪದಕ್ಕೆ ಸಂಸ್ಕೃತದ
‘ಕಥ್’ ಎಂಬ ಪದ ಮೂಲವಾಗಿದೆ. ಕಥೆ ಎಂದರೆ ‘ಹೇಳು’ ಎಂದರ್ಥ. ‘ಕಥಾ’ ಎಂಬ ಶಬ್ಧದ ಪ್ರಯೋಗವು ಪ್ರಥಮವಾಗಿ
ವೇದಗಳಲ್ಲಿಯೇ ಕಂಡುಬರುತ್ತದೆ. ಕಥೆ ಹೇಳುವವನನ್ನು ‘ಕಥಕಾ’ ಎಂದು ಕರೆಯಲಾಗುತ್ತದೆ(ಪಾಣಿನಿ).
ಕಥಾನಕ ಎಂದರೆ ‘ಹೇಳುವಿಕೆ’ ಎಂದರ್ಥ.
·
‘ಕಥ್+ಅ=ಕಥಾ. ಮುಂದೆ ಈ ಪದವು ಕಥ್+ಎ=ಕಥೆ-ಅಂದರೆ ‘ಅ’ ಸ್ಥಾನದಲ್ಲಿ ‘ಎ’ ಬಂದು ಸೇರಿತು. ಮುಂದೆ ಈ ‘ಕಥೆ’ ಎಂಬ ಪದವೇ
ಆಡುಮಾತಿನಲ್ಲಿ ‘ಕತೆ’ ಎಂದು ಬಳಕೆಯಾಗುತ್ತಿದೆ. ಒಟ್ಟಿನಲ್ಲಿ ಕತೆ ಎಂದರೆ-“ಸತ್ಯ ಮತ್ತು ಕಲ್ಪನೆಗಳ
ಸಮ್ಮಿಶ್ರರೂಪವಾಗಿದೆ.”
ಕಥೆಗಳ ಉಗಮ ಮತ್ತು ವಿಕಾಸ :
·
ಕಥೆಗಳು ಮೂಲತಃ ಮೌಖಿಕ ಪರಂಪರೆಯಿಂದ ಸೃಷ್ಟಿಯಾದವು ಎಂಬುದು ನಿರ್ವಿವಾದವಾದ
ಸಂಗತಿಯಾಗಿದೆ. ಆದರೆ ಜನಪದವು ಕಥೆಗಳಿಗೆ ಮೂಲ ಆಕರವಾಗಿದ್ದು, ವೇದಗಳ ಕಾಲದಿಂದ ರಾಮಾಯಣ, ಮಹಾಭಾರತದಂತಹ
ಶ್ರೇಷ್ಟ ಪೌರಾಣಿಕ ಗ್ರಂಥಗಳು ಸಹ ಜನಪದರ ಮೂಲಕ ಮೌಖಿಕ ಪರಂಪರೆಯಲ್ಲಿ ಉಳಿದು ಬೆಳೆದು ಬಂದಿವೆ.
ಆದ್ದರಿಂದಲೇ ‘ರಾಮಾಯಣ ಮತ್ತು ಮಹಾಭಾರತಗಳನ್ನು ಕಥೆಗಳ ಕಗ್ಗಾಡು’
ಎಂದು ಕರೆಯಲಾಗುತ್ತದೆ’
·
ಭಾರತೀಯ ಶಿಷ್ಟ ಸಾಹಿತ್ಯದಲ್ಲಿ ಕಥೆಗಳ ಬೆಳವಣಿಗೆಯನ್ನು ನೋಡುವುದಾದರೆ; ಗುಣಾಢ್ಯನಿಂದ
ಪೈಶಾಚಿ ಭಾಷೆಯಲ್ಲಿ ರಚಿತವಾದ ‘ಬೃಹತ್ಕಥಾ’ (ಕ್ರಿ.ಶ.550-600) ಗ್ರಂಥವು ಭಾರತದ ಪ್ರಾಚೀನ
ಕಥನಗ್ರಂಥವೆಂಬ ಖ್ಯಾತಿಯನ್ನು ಪಡೆದಿದೆ. ಇದನ್ನು ‘ದುರ್ವಿನೀತನು’ ‘ವಡ್ಡಕಥಾ’ ಎಂಬ ಹೆಸರಿನಲ್ಲಿ
ಕನ್ನಡೀಕರಿಸಿದ್ದಾನೆ. ಈ ಬೃಹತ್ಕಥೆಯ ಜೊತೆಗೆ ಹೆಸರಿಸಬಹುದಾದ ಇನ್ನೊಂದು ಮಹಾನ್ ಗ್ರಂಥವೆಂದರೆ,
ವಸುಭಾಗಭಟ್ಟ ಸಂಸ್ಕೃತ ‘ಪಂಚತಂತ್ರ’ ಕೃತಿಯಾಗಿದೆ.
·
ಅದೇರೀತಿ ಕನ್ನಡ ಶಿಷ್ಟ ಸಾಹಿತ್ಯದಲ್ಲಿ ಕಥೆಗಳ ಬೆಳವಣಿಗೆಯನ್ನು ನೋಡುವುದಾದರೆ-
· ಕನ್ನಡ ಮೊದಲ ಕೃತಿ ಶ್ರೀವಿಜಯನ ಕವಿರಾಜಮಾರ್ಗ
ಕೃತಿಯಲ್ಲಿ ಹಾಗೂ
· ನಾಗವರ್ಮನ ‘ಕಾವ್ಯಾವಲೋಕನ’ ಕೃತಿಯಲ್ಲಿ
ಗದ್ಯಕಥಾ ಎಂಬ ಪದ ಬಳಕೆಯನ್ನು ನೋಡಬಹುದು.
· ಆದರೆ ಕನ್ನಡದ ಮೊದಲ ಗದ್ಯಕೃತಿಯೆಂದರೆ-ಶಿವಕೋಟ್ಯಾಚಾರ್ಯನ
‘ವಡ್ಡಾರಾಧನೆ’(950) ಕೃತಿಯಾಗಿದೆ.
· ನಂತರ ಚಾವುಂಡರಾಯನ-ಚಾವುಂಡರಾಯ ಪುರಾಣ.
· ಬಂಧುವರ್ಮನ – ಜೀವಸಂಭೋಧನಂ
· ನಯಸೇನನ – ಧರ್ಮಾಮೃತ
· ಬ್ರಹ್ಮಶಿವನ – ಸಮಯ ಪರೀಕ್ಷೆ -ಹೀಗೆ ಮೊದಲಾದ ಹಳಗನ್ನಡ
ಗದ್ಯಕಥಾ ಸಂಗ್ರಹಗಳನ್ನು ನೋಡಬಹುದು.
ಇವೆಲ್ಲವುಗಳ ಜೊತೆಗೆ ಮಕ್ಕಳಿಂದ – ವೃದ್ಧರವರೆಗೆ ಸರ್ವರೂ ಇಷ್ಟಪಡುವ
ಕ್ರಿ.ಶ.1031ರಲ್ಲಿ ರಚಿತವಾದ ದುರ್ಗಸಿಂಹನ
ಕನ್ನಡ ‘ಪಂಚತಂತ್ರ’ ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಕಥಾಸಂಗ್ರಹ ಕೃತಿ ಎಂದು
ಹೇಳಬಹುದು.
No comments:
Post a Comment